ಚುನಾವಣಾ ಕರ್ತವ್ಯದ ಬಳಿಕ ಸ್ವಸ್ಥಾನಕ್ಕೆ ಮರಳಿದ ಅಧಿಕಾರಿಗಳು: ತೆರಿಗೆ ವಂಚಕರ ವಿರುದ್ಧ ಕ್ರಮಕ್ಕೆ ಮುಂದು! ಲೋಕಸಭಾ ಚುನಾವಣೆ ಚುನಾವಣಾ ಕರ್ತವ್ಯ ಪೂರ್ಣಗೊಳಿಸಿದ ಬಳಿಕ ಸ್ವಸ್ಥಾನಕ್ಕೆ ಬಿಬಿಎಂಪಿ ಅಧಿಕಾರಿಗಳು ಮರಳಿದ್ದು, ತೆರಿಗೆ ವಂಚಕರತ್ತ ಗಮನ ಹರಿಸಿದ್ದಾರೆ. ಬೆಂಗಳೂರು: ಲೋಕಸಭಾ ಚುನಾವಣೆ ಚುನಾವಣಾ ಕರ್ತವ್ಯ ಪೂರ್ಣಗೊಳಿಸಿದ ಬಳಿಕ ಸ್ವಸ್ಥಾನಕ್ಕೆ ಬಿಬಿಎಂಪಿ ಅಧಿಕಾರಿಗಳು ಮರಳಿದ್ದು, ತೆರಿಗೆ ವಂಚಕರತ್ತ ಗಮನ ಹರಿಸಿದ್ದಾರೆ,ಕೆಲವರು ‘ಒನ್ ಟೈಮ್ ಸೆಟ್ಲ್‌ಮೆಂಟ್’ (ಒಟಿಎಸ್) ಯೋಜನೆಯ ಅಡಿಯಲ್ಲಿ ತೆರಿಗೆ ಕಟ್ಟಿಲ್ಲ. ಹೀಗಾಗಿ ತೆರಿಗೆ ಕಟ್ಟದ ಆಸ್ತಿಗಳು, ವಿಶೇಷವಾಗಿ ವಾಣಿಜ್ಯ ಕಟ್ಟಡಗಳ ವಶಕ್ಕೆ ಪಡೆಯುವಂತೆ ಕಂದಾಯ ಅಧಿಕಾರಿಗಳಿಗ ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.ಒನ್ ಟೈಮ್ ಸೆಟ್ಲ್‌ಮೆಂಟ್ ಯೋಜನೆಯಡಿಯಲ್ಲಿ, ದೀರ್ಘಾವಧಿಯ ತೆರಿಗೆ ಬಾಕಿಗಳ (ಐದು ವರ್ಷಗಳು) ಬಡ್ಡಿಯ ಮೇಲೆ ಶೇಕಡಾ 50 ರಷ್ಟು ಕಡಿತವನ್ನು ನೀಡಲಾಗಿತ್ತು. ಕಂದಾಯ ಅಧಿಕಾರಿಗಳು ಅಂತಹ ಸುಸ್ತಿದಾರರಿಗೆ ನೋಟಿಸ್ ಜಾರಿ ಮಾಡಿದ್ದು, ಶೀಘ್ರದಲ್ಲಿಯೇ ಆಸ್ತಿಗಳನ್ನು ವಶಪಡಿಸಿಕೊಳ್ಳುವಂತಹ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.ತೆರಿಗೆ ಬಾಕಿಯ ಮೇಲೆ ಶೇಕಡಾ 50 ರಷ್ಟು ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಮೂರು ತಿಂಗಳ ಹಿಂದೆಯೇ ಯೋಜನೆ ಜಾರಿಗೆ ಬಂದಿದ್ದರೂ ಬಾಕಿ ಉಳಿಸಿಕೊಂಡಿರುವ ಕಟ್ಟಡ ಮಾಲೀಕರು ಅವಕಾಶವನ್ನು ಬಳಸಿಕೊಂಡಿಲ್ಲ. ಬಾಕಿ ಇರುವ ತೆರಿಗೆಯನ್ನು ವಸೂಲಿ ಮಾಡಲು ಪಾಲಿಕೆ ಸೋಮವಾರದಿಂದ ಅಂತಹ ಕಟ್ಟಡಗಳನ್ನು ವಶಪಡಿಸಿಕೊಂಡು ಬೀಗ ಹಾಕಲಿದೆ ಎಂದು ಬಿಬಿಎಂಪಿ ಕಂದಾಯ ಅಧಿಕಾರಿಯೊಬ್ಬರು ತಿಳಿಸಿದರು.ಈ ಕುರಿತು ಹಲವು ಬಾರಿ ನೋಟಿಸ್‌ ಜಾರಿ ಮಾಡಿದರೂ ಕೆಲವರು ಸ್ಪಂದಿಸಿಲ್ಲ. ಅವರ ಆಸ್ತಿ, ಅದರಲ್ಲೂ ವಾಣಿಜ್ಯ ಕಟ್ಟಡಗಳಿಗೆ ಬೀಗ ಹಾಕುವ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.